ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ನಿಮಿತ್ಯವಾಗಿ ಇಂದು ಮಲ್ಲಿಕಾರ್ಜುನ ನಗರದಲ್ಲಿರುವ ಅಂಧಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು. ಅಂಧ ಮಕ್ಕಳ ಕೈಯಿಂದ ಕೇಕ್ ಕತ್ತರಿಸುವ ಮೂಲಕ ಈ ದಿನವನ್ನು ವಿಶಿಷ್ಟವನ್ನು ಆಚರಿಸಿದರು. ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳು ಅಂಧ ಮಕ್ಕಳಿಗೆ ಸಿಹಿ ತಿನ್ನಿಸಿದರು ಮತ್ತು ಅಂಧ ವಿದ್ಯಾರ್ಥಿಗಳಿಗೆ ದಿನ ನಿತ್ಯ ಬಳಸುವ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಚಂದನಗೌಡ ಮಾಲಿಪಾಟೀಲ ಮಾತನಾಡುತ್ತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯು ಪ್ರತಿಯೊಂದು ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತ ಬಂದಿದೆ. ವಿದ್ಯಾರ್ಥಿಗಳಿಗೆ ಕೇವಲ ಪಾಠ ಬೋಧನೆ ಮಾಡುವದಷ್ಟೆ ಅಲ್ಲದೆ ಅವರಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಒಳ್ಳೆಯ ಗುಣಗಳನ್ನು ಬೆಳೆಸುತ್ತ ಬಂದಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಸಮಾಜಿಕ ಸೇವೆ ಮಾಡುವ ಗುಣ ಬೆಳೆಯುತ್ತದೆ ಎಂದು ನುಡಿದರು. ಅಲ್ಲದೇ ಅಲ್ಲಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಎಲ್ಲ ಅಂಗಾಂಗಳು ಇದ್ದ ಮಕ್ಕಳೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಆದರೆ ಕಣ್ಣು ಕಾಣದ ಈ ವಿಶೇಷ ಚೇತನ ಮಕ್ಕಳು ನಿರರ್ಗಳವಾಗಿ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಮಕ್ಕಳು ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ಅನುದಾನ ರಹಿತ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಸಿದ್ದು ಕಪ್ಪೇನ್ನವರ ಅವರು ಶಾಲಾ ವಿದ್ಯಾರ್ಥಿಗಳಿಗೆ ಬದಾಮಿ ಹಾಲು ವಿತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಶರತ ಎಸ್. ಬಿರಾದಾರ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ವಿವೇಕ ವೈಶಂಪಾಯನ. ಮೊಹ್ಮದ ಅಲಿ, ಎಸ್.ಆರ್.ಕಟ್ಟಿಮನಿ, ಹಫೀಜ್, ಅಶ್ವೀನ ಶ್ರೀದೇವಿ ಜೋಳದ, ಸೀಮಾ ಸದಲಗಾ, ಗಿರಿಜಾ ಕರಡಿ, ಸಮೀನಾ ತೊರವಿ, ಸರೋಜಾ ಕರ್ಕಳಿ, ಭಾರತಿ ಪಾಟೀಲ, ಎಸ್.ಎ.ಹುಗ್ಗಿ, ರೇಣುಕಾ ಕಡೇಮನಿ, ಕಾಶೀನಾಥ ಅವಟಿ, ರಾಜೇಶ್ವರಿ ಪಿ. ಮಮತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.